Monday, 19 October 2020

ಅಡಿಕೆ ಸುಲಿಯುವುದರಲ್ಲೂ ದಾಖಲೆ!ಎನ್.ವಿ. ರಮೇಶ್

ಬಸವಾಪಟ್ಟಣ: ಇಲ್ಲಿಯ ಶೃಂಗಾರ್ ಬಾಗ್ ತಾಂಡಾದ ಬಡ ಕೂಲಿಕಾರ ದಂಪತಿ ರುದ್ರಾ ನಾಯ್ಕ–ಜಯಾಬಾಯಿ ಅವರ ಮಗಳು ಆರ್. ಶಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತ ಬಿಡುವಿನ ವೇಳೆಯಲ್ಲಿ ಅಡಿಕೆ ಸುಲಿಯುವ ಕೆಲಸದಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಸಾಮಾನ್ಯವಾಗಿ ಅಡಿಕೆ ಸುಲಿಯುವ ಕೂಲಿಕಾರರಲ್ಲಿ ಹೆಚ್ಚಾಗಿ ಮಹಿಳೆಯರೇ ಇರುತ್ತಾರೆ. 15 ಲೀಟರ್ ಗಾತ್ರದ ಡಬ್ಬದಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ದಿನಕ್ಕೆ ಹೆಚ್ಚೆಂದರೆ 5 ಡಬ್ಬ ಅಡಿಕೆ ಸುಲಿಯುತ್ತಾರೆ. ಆದರೆ ಶಾಂತಾ 8ರಿಂದ 9 ಡಬ್ಬಗಳವರೆಗೆ ಅಡಿಕೆ ಸುಲಿದು ದಿನಕ್ಕೆ ₹ 800ರಿಂದ ₹ 900ರವರೆಗೆ ಗಳಿಸುತ್ತಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ರಜೆಯ ದಿನಗಳಲ್ಲಿ ತಾಯಿ ಜಯಾಬಾಯಿ ಅವರೊಂದಿಗೆ ಅಡಿಕೆ ಸುಲಿಯುವ ಕೆಲಸದಲ್ಲಿ ತರಬೇತಿ ಪಡೆದ ಶಾಂತಾ, ಇಂದಿಗೂ ಕಾಲೇಜಿನ ರಜಾ ದಿನಗಳಲ್ಲಿ ಈ ಕಾಯಕವನ್ನು ಮುಂದುವರಿಸಿದ್ದಾರೆ.

ನಾನು ಸುಮಾರು 30 ವರ್ಷಗಳಿಂದ ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದು, ಈವರೆಗೆ 5ರಿಂದ 6 ಡಬ್ಬ ಅಡಿಕೆ ಸುಲಿಯುವುದರೊಳಗೆ ಸುಸ್ತಾಗುತ್ತದೆ. ಆದರೆ, ಶಾಂತಾ ಅಡಿಕೆ ಸುಲಿಯುವ ವೇಗ ನೋಡಿ ಅಚ್ಚರಿಯಾಗುತ್ತದೆ. ಕಾಲೇಜಿನಲ್ಲಿ ಓದುತ್ತಿದ್ದರೂ ಸ್ವಲ್ಪವೂ ಹಿಂಜರಿಯದೇ ಓದಿನೊಂದಿಗೆ ಈ ಕಾರ್ಯದಲ್ಲಿ ತೊಡಗಿ ಸಂಸಾರಕ್ಕೆ ನೆರವಾಗುತ್ತ ಇತರ ಯುವತಿಯರಿಗೆ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಜಯಮ್ಮ.

ಶಾಂತಾ ಅವರು ಹಲವು ವರ್ಷಗಳಿಂದ ಅಡಿಕೆ ಸುಲಿಯುವ ಕೆಲಸಕ್ಕಾಗಿ ನಮ್ಮಲ್ಲಿಗೆ ಬರುತ್ತಿದ್ದು, ಯಂತ್ರದಂತೆ ಓಡುವ ಅವರ ಕೈಗಳಲ್ಲಿ ಹಸಿ ಅಡಿಕೆ ಸುಲಿಯುವ ಕಾರ್ಯ ಮೆಚ್ಚುವಂಥದ್ದು’ ಎನ್ನುತ್ತಾರೆ ಅಡಿಕೆ ಬೆಳೆಗಾರ ಕೆ.ರುದ್ರಪ್ಪ.

ಸರ್ಕಾರಿ ಶಾಲೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಶಾಂತಾ, ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ನಂತರ ಇಲ್ಲಿಯ ಎಲ್.ಸಿದ್ಧಪ್ಪ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಹ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗ ಇಲ್ಲಿಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪದವಿಯ ನಂತರ ಬಿ.ಇಡಿ ಪದವಿ ಗಳಿಸಿ ಶಿಕ್ಷಕಿಯಾಗಬೇಕು ಎನ್ನುವುದು ಅವರ ಇಚ್ಛೆ. ತಂದೆ–ತಾಯಿಗೆ ಸ್ವಂತ ಮನೆ ಮಾಡಿಕೊಡಬೇಕು ಎಂಬ ಹಂಬಲವನ್ನೂ ಹೊಂದಿದ್ದಾರೆ.

ಮಾಹಿತಿ ಕೃಪೆ: ಮೈಸೂರು ಫಾರ್ಮರ್ಸ ಅಸೋಸಿಯೇಷನ್

No comments:

Post a Comment